ಭಾನುವಾರ, ಮಾರ್ಚ್ 21, 2010

ಕುವೆಂಪು ಅವರಿಂದ ಕಲಿಯಬೇಕಾದ " glocalisation" ಪಾಠ

ಕುವೆಂಪು ಅವರಿಗೂ "glocalisation"ಗೂ ಎತ್ತಣಿಂದೆತ್ತಣ ನಂಟು ಅಂತಾನಾ? ಇದೆ ಇದೆ.. ರಾಬರ್ಟ್ ಬ್ರೌನಿಂಗ್ ಬರೆದಿದ್ದ "pied piper of Hamelin" ಕವನವನ್ನ ಕುವೆಂಪು ಅವರು ಕನ್ನಡದಲ್ಲಿ ತಂದರು. ತಂದರು ಅಂದ್ರೆ ಹೇಗಿದ್ಯೋ ಹಾಗೆ ಅದನ್ನ ಕನ್ನಡಕ್ಕೆ ಅನುವಾದ ಮಾಡಲಿಲ್ಲ. ಅದನ್ನ ಪೂರ್ತಿ ಕನ್ನಡೀಕರಿಸಿದ್ರು.ಕುವೆಂಪು ಅವರ ಕೈಯಲ್ಲಿ "pied piper of Hamelin" "ಬೊಮ್ಮನಹಳ್ಳಿಯ ಕಿಂದರಿ ಜೋಗಿ" ಆಗಿದ್ದ. ಸ್ವಲ್ಪ ಯೋಚಿಸಿ. ಅವರು ಹೀಗೆ ಮಾಡದೆ, ಸುಮ್ನೆ "ಬಣ್ಣ-ಬಣ್ಣದ ಬಟ್ಟೆ ತೊಟ್ಟ ಹಾಮ್ಲಿನ್ನ ಪೀಪಿ ಊದೋನು" ಅಂತ ಬರೆದಿದ್ರೆ ಅದ್ ಯಾವ್ ಕನ್ನಡದ ಮಕ್ಳು ಇದನ್ನ ಹಾಡಿ ಕುಣೀತಿದ್ರು? ಇದರಿಂದ ಏನ್ ತಿಳಿಯುತ್ತೆ? ಯಾವ ಯಾವ ಜಾಗದ ಜನರಿಗೆ ಯಾವ್-ಯಾವುದು ಮನಸ್ಸಿಗೆ, ಜೀವನಕ್ಕೆ ಹತ್ತಿರ ಆಗಿರತ್ತೋ, ಅವರನ್ನ ಅದ್ರ ಮೂಲಕಾನೇ ತಲುಪಲು ಸಾಧ್ಯ.

ಇದು ನಮ್ಮ ಕರ್ನಾಟಕದಲ್ಲಿ ಬಂದು ರಸ್ತೆ, ಟೀವಿ, ನ್ಯೂಸ್-ಪೇಪರ್, ಪಾಂಪ್ಲೆಟ್ ಎಲ್ಲಾದ್ರಲ್ಲು ಜಾಹೀರಾತುಗಳನ್ನ ಹಾಕ್ತಾರಲ್ಲ ಅವ್ರುಗಳು ಖಂಡಿತ ಅರ್ಥಾ ಮಾಡ್ಕೋ ಬೇಕು. "Glocalisation" ಇವತ್ತಿನ ವ್ಯಾಪಾರ, ಮುಕ್ತ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಅಂಶ. ಒಂದು ಪದಾರ್ಥ ಯಾವುದೇ ಒಂದು ಪ್ರದೇಶದಲ್ಲಿ ಎಷ್ಟರಮಟ್ಟಿಗೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಅನ್ನೋದು, ಆ ಪದಾರ್ಥ ಅಲ್ಲಿನ ಜನರಿಗೆ ಎಷ್ಟು ಹತ್ರ ಆಗತ್ತೆ ಅನ್ನೋದ್ರ ಮೇಲೆ ಅವಲಂಬಿತವಾಗಿರತ್ತೆ.

Mc Donald ಇಡೀ ಜಗತ್ತಿನೆಲ್ಲೆಡೆ ಪ್ರಸಿದ್ದವಾಗಿದೆ. ಇದು ಹುಟ್ಟಿದ್ದು ಅಮೇರಿಕಾದಲ್ಲಾದ್ರೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಜನರ ಅಭಿರುಚಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಂಡು ವಾಪಾರ ಮಾಡ್ತಾ ಇದೆ. ಭಾರತದಲ್ಲೂ ಇದರ ಭರಾಟೆ ಕಮ್ಮಿ ಏನಿಲ್ಲ. ಆದ್ರೆ, ಭಾರತ ಬೇರೆ ದೇಶಗಳಂತೆ ಒಂದೇ-ಒಂದು ನುಡಿಯನ್ನಾಡುವ, ಒಂದೇ-ಒಂದು ಸಂಸ್ಕ್ರುತಿಯಿರುವ ದೇಶವಲ್ಲ. ಇವರು ಇಲ್ಲಿ ಬೆಂಗಳೂರಲ್ಲಿ ಈ
ರೀತಿ ಇಂಗ್ಲೀಷ್-ನಲ್ಲಿ ಬರೆದ ಹಿಂದೀ ಜಾಹೀರಾತುಗಳನ್ನ ಹಾಕೋದ್ರಿಂದ ಇವರು ಯಾರನ್ನ ಸೆಳೀತಿದಾರೆ? ಅಷ್ಟಕ್ಕೂ ಬೆಂಗಳೂರಲ್ಲಿ ಇರೋದು ಬರೀ ಹಿಂದೀ ಮಾತಾಡೋ ಜನರಾ? ಅಥವಾ ಕನ್ನಡಿಗರಿಗೆ ಅವರ ಭಾಷೆಯಲ್ಲಿ ಯಾವುದಾದರೂ ವಿಚಾರ ತಿಳಿಸೋ ಅವಶ್ಯಕತೇನೇ ಇಲ್ಲವೋ? ಹಿಂಗ್ಲಿಷ್ ಜಾಹೀರಾತು ಯಾಕೆ?

ಮೊನ್ನೆ ಮೊನ್ನೆ ಟೀವಿಯಲ್ಲಿ ICICI prudential ಅವರ ಒಂದು ಜಾಹೀರಾತು ಬರ್ತ ಇತ್ತು. ಅಮ್ಮ ಒಬ್ಬಳು ತನ್ನ ತುಂಟ ಮಗನಿಗೆ "ಈಗ ಒಂದ್-ದಮ್ ಸುಮ್ಗಿರು" ಅಂತಾ ಅಂತಾಳೆ ಇದ್ರಲ್ಲಿ.!! ಏನಿದು "ಒಂದ್-ದಮ್"?? ಇದು ಕನ್ನಡಿಗರ್ಯಾರೂ ಬಳಸದ ಭಾಷೆ. ಯೋಚಿಸಿದ್ರೆ ಗೊತ್ತಾಗೋದು ಹಿಂದಿಯ "ಏಕ್-ದಮ್ ಚುಪ್" ಅನ್ನೋದನ್ನ ಈ ರೀತಿ ಕನ್ನಡೀಕರಿಸಿದ್ದಾರೆ.

ಇದೇ ರೀತಿ ಗೋದಿಹಿಟ್ಟು ಆಟ್ಟಾ ಆಗಿದೆ, ಬೇಳೆಗಳು ದಾಲ್ ಆಗಿವೆ, ಗೋಡಂಬಿ-ದ್ರಾಕ್ಷಿಗಳು ಕಾಜು-ಕಿಸ್ಮಿಸ್ ಆಗಿವೆ. "nimbooz" ಅವರ ಟೀ.ವಿ ಜಾಹೀರಾತಿನಲ್ಲಿ ಇರುವುದು ತಮಿಳರು, ತಮಿಳು ಅಂಗಡಿಗಳು. you see, tamil is not glocal to Karnataka. ಹಾಗೇ ಈ ಬಿಗ್-ಬಜಾರ್, ಸ್ಟಾರ್-ಬಜಾರ್ ಮುಂತಾದವರು ನ್ಯೂಸ್ ಪೇಪರ್ನಲ್ಲಿ ಹಾಕುವ ಜಾಹೀರಾತುಗಳು ದೇವರಿಗೇ ಪ್ರೀತಿ. "ಪಟ್ಟು ಪವಡೈ" ಅಂದ್ರೆ ಅದ್ ಯಾರಿಗ್ ಅರ್ಥ ಆಗತ್ತೆ? ಅಚ್ಚುಟ್ಟಾಗಿ ಕನ್ನಡದಲ್ಲಿ "ರೇಶ್ಮೆ ಲಂಗ" ಅಂತ ಬರೀಬಹುದಲ್ವೆ? ಇವರೆಲ್ಲ ಕನ್ನಡವನ್ನ ಕಡೆಗಣಿಸ್ತಿದಾರೆ ಅಂದ್ರೆ ಕನ್ನಡಿಗರನ್ನ ಕಡೆಗಣಿಸ್ತಿದಾರೆ ಅಂತಾನೆ ಅರ್ಥ. ಬೆಂಗಳೂರಿನ ಮಾಲ್-ಗಳಲ್ಲಿ ಅತೀ ಹೆಚ್ಚು ಕೊಳ್ಳುವ ಶಕ್ತಿ ಇರೋದು ಕನ್ನಡಿಗರಿಗೆ.(ಇಲ್ಲಿ ನೋಡಿ). ಹೀಗಿದ್ರೂ ಕನ್ನಡಿಗರು ತಮ್ಮ ಭಾಷೆಯಲ್ಲೆ ಎಲ್ಲಾ ಸೇವೆಗಳನ್ನ ಪಡೆಯುವುದು ಯಾಕೆ ಸಾಧ್ಯ ಆಗ್ತಾ ಇಲ್ಲ? ಪಿಜ್ಜಾ ಹಟ್ನಲ್ಲಿ, ಮಾಕ್-ಡೊನಾಲ್ಡ್ನಲ್ಲಿ ಇನ್ನೂ ಎಲ್ಲೆಲ್ಲೂ by default ಹಿಂದಿ ಹಾಡುಗಳನ್ನ ಹಾಕಿರ್ತಾರೆ. ಕನ್ನಡ ಹಾಡು ಬೇಕುಅಂತ ನಾವು ಅವರಿಗೆ Request ಮಾಡ್ಕೋಬೇಕಂತೆ. ಹೀಗೇ ಇವ್ರು ತಮಿಳ್ನಾಡ್ನಲ್ಲಿ ಹಿಂದಿ ಹಾಕಿರ್ತಾರಾ? ನಮ್ಮ ಊರಲ್ಲಿ ನಮ್ಮ ಭಾಷೆ ಹಾಡು ಕೇಳಕ್ಕೆ ನಾವೇ ಬೇಡ್ಕೋಬೇಕಾ?.

ಇವರೆಲ್ಲರನ್ನ ಸರಿದಾರಿಗೆ ತರಲು ಸಾಧ್ಯ ಇರೋದು ನಮಗೆ ಮಾತ್ರ. ಗ್ರಾಹಕರಾದ ನಮಗೆ ನಮ್ಮ ನುಡಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವ ಹಕ್ಕಿದೆ.ನಾವು ದುಡ್ಡು ಕೊಟ್ಟು ಕೊಂಡುಕೊಳ್ಳುವ ಯಾವುದೇ ಪದಾರ್ಥಗಳಿಗೆ, ಸೇವೆಗಳಿಗಾಗಿ ನಾವೇ ಬೇರೆಯಾವುದೋ ಭಾಷೆಯನ್ನ ಕಲಿಯಬೇಕಿಲ್ಲ. ಎಲ್ಲೆಲ್ಲಿ ಕನ್ನಡವನ್ನ ಕಡೆಗಣಿಸಿರ್ತಾರೋ ಅಲ್ಲಲ್ಲಿ ನಾವು ಅವರಿಗೆ ದೂರು ನೀಡಿ, ಅವರು ಕನ್ನಡವನ್ನೇ ಬಳಸುವಂತೆ ಮಾಡಬೇಕು. ಇದರಿಂದ ಅವರಿಗೇ ಲಾಭ. ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪಲು ಕನ್ನಡ ಬಳಸಬೇಕೇ ಹೊರತ ಇಂಗ್ಲಿಷ್ ಅಥವಾ ಹಿಂಗ್ಲಿಷ್ ಅಲ್ಲ.

ಶನಿವಾರ, ಮಾರ್ಚ್ 13, 2010

ಆಹಾ ಗಣತಂತ್ರವೇ !!

ಇವತ್ತಿನ ಬಹುತೇಕ ವಾರ್ತಾ ಪತ್ರಿಕೆಗಳಲ್ಲಿ ಬಿ.ಬಿ.ಎಂ.ಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಪಕ್ಷಗಳ ಬಗ್ಗೆ ಮತ್ತು ಅಭ್ಯರ್ತಿಗಳ ಬಗ್ಗೆ ಬಂದಿದೆ. ಬೆಂಗಳೂರಿನಲ್ಲಿ ಜಯಲಲಿತಾ ಪಕ್ಷವಾದ ಎಐಎಡಿಎಂಕೆ ಈಗಾಗಲೇ ಸುಮಾರು ೧೪ ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಇನ್ನೂ ಹೆಚ್ಚುಜನರ ಹೆಸರುಗಳ ಪಟ್ಟಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡ್ತಾರಂತೆ ಜಯಲಲಿತಾ ಮೇಡಂ..
ಅಲ್ಲಾ.. ಅಪ್ಪಟ ತಮಿಳುನಾಡಿನ ಪಕ್ಷವಾದ AIADMK (All India ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಇವರೇನು ಕರ್ನಾಟಕವನ್ನು ಪ್ರತಿನಿಧಿಸುವವರಾಗಿಬಿಡುವುದಿಲ್ಲ) ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ತನ್ನ ಜನರನ್ನು ಕಣಕ್ಕಿಳಿಸಿರುವುದರಿಂದ ಬೆಂಗಳೂರಿಗಾಗಲಿ, ಇಲ್ಲಿನ ಕನ್ನಡಿಗರಿಗಾಗಲೀ ಯಾವ ಪ್ರಯೋಜನವಾಗಬಹುದು? ಮೊದಲೇ ಬೆಂಗಳೂರಿನಲ್ಲಿ ಕನ್ನಡದಕೆಲಸಗಳು ನಡೆಯೋದು, ನಡೆಸಿಕೊಳ್ಳೋದು ಎಷ್ಟು ಕಷ್ಟದ ಕೆಲಸ. ನಮ್ಮ ದೇಶದಲ್ಲಿ ಯಾರು ಎಲ್ಲಿ ಹೋದರೂ ಅವರು ಭಾರತೀಯರೇ ಆಗಿರುತ್ತಾರೆ, ನಿಜ. ಆದ್ರೆ, ಈ ರೀತಿ ತಮಿಳು ನಾಡಿನ ಒಂದು ಪ್ರಾದೇಶಿಕ ಪಕ್ಷ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲುತ್ತಿರುವಂತೆ, ಒಂದು ಕನ್ನಡದ ಪಕ್ಷ ತಮಿಳುನಾಡಿನ ಚೆನ್ನೈನಲ್ಲಿ ಚುನಾವಣೆಗೆ ನಿಲ್ಲುವುದು ಸಾಧ್ಯ? ಇಲ್ಲ, ಸಧ್ಯಕ್ಕಂತೂ ಇಲ್ಲ.

ಬೆಳಗಾವಿಯಲ್ಲಿ ಕನ್ನಡಿಗರೊಬ್ಬರು ಮೇಯರ್ ಆಗಲು ಅಲ್ಲಿನ ಕನ್ನಡಿಗರು ಸುಮಾರು ೧೮ ವರ್ಷಗಳಕಾಲ ಕಾದುನೋಡಬೇಕಾಯಿತು. ಕರ್ನಾಟಕ ರಕ್ಶಣಾ ವೇದಿಕೆಯ ಹೋರಾಟದ ಫಲವಾಗಿ ಅಲ್ಲಿ ಈ ದಿನ ಮರಾಟಿಗರ ಬದಲಾಗಿ ಕನ್ನಡಿಗರು ತಮ್ಮ ನೆಲದಲ್ಲಿ ತಾವೇ ಅಧಿಕಾರ ಪಡೆಯುವಲ್ಲಿ ಸಫಲರಾಗಿದ್ದಾರೆ.(ನೋಡಿ)

ಇದೇ ರೀತಿ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ತಮಿಳರು ಅಧಿಕಾರಕ್ಕೆ ಬರುವಲ್ಲಿ ಸಫಲರಾದರೆ ಕನ್ನಡಿಗರಿಗೆ ಎಂಥಾ ಅವಮಾನ. ನಮ್ಮ ರಾಜಧಾನಿಯಲ್ಲಿ ನಾವೇ ಅಧಿಕಾರಕ್ಕಾಗಿ ಬಡಿದಾಡಬೇಕೆ? ಅದೂ ಪಕ್ಕದ ತಮಿಳುನಾಡಿನ ಪ್ರಾದೇಶಿಕ ಪಕ್ಷದೊಂದಿಗೆ?

ಕರ್ನಾಟಕ ರಕ್ಷಣಾ ವೇದಿಕೆಯನ್ನ ಒಂದು "fringe group" ಅಂತ ಕರೆಯೋ, ಅವರನ್ನು ಅಥವಾ ಅವರಂತೆ ಕನ್ನಡ, ಕರ್ನಾಟಕಗಳೀಗಾಗಿ ಕೆಲಸ ಮಾಡುವವರನ್ನು, ಹೋರ‍ಾಡುವವರನ್ನು "regional" ಅಂತಾ ಬಿಂಬಿಸೋ ನಮ್ಮ ದೇಶದ English ಮೀಡಿಯಾ ಅಂದ್ರೆ, so called national ಮೀಡಿಯಾ ಎಐಎಡಿಎಂಕೆ ಬಗ್ಗೆ ಏನೂ ಹೇಳದಿರುವುದಕ್ಕೆ ಕಾರಣ ಏನಿರಬಹುದು?(ನೋಡಿ,ಇದೂ ನೋಡಿ) ದೆಲ್ಲಿಯಲ್ಲಿನ ಸರ್ಕಾರವನ್ನ ಹೇಗಾದರೂ ಮಾಡಿ ತಮ್ಮ ಹಿಡಿತದಲ್ಲಿರಿಸಿಕೊಂಡು, ಕೇವಲ ತಮ್ಮ ರಾಜ್ಯಕ್ಕೆ(ಪಕ್ಕದ ರಾಜ್ಯಕ್ಕೆ ಕೆಡುಕು ಮಾಡಿ) ಕೆಲಸಮಾಡುವ ಎಐಎಡಿಎಂಕೆ-ಗೆ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಲು ಯಾವ ಅರ್ಹತೆಗಳಿವೆ? ನಮ್ಮದು ಗಣತಂತ್ರ ಅಂದ ಮಾತ್ರಕ್ಕೆ, ಈ ರೀತಿಯ ಒಂದು ಪ್ರಾದೇಶಿಕ ಪಕ್ಷ ಇನ್ನೊಂದು ರಾಜ್ಯದಲ್ಲಿ ಹೋಗಿ ಚುನಾವಣೆಗೆ ನಿಲ್ಲಬಹುದಾದರೆ, ಇಂತಹ ಒಂದು ವ್ಯವಸ್ಥೆಯಿಂದ ಭಾರತದ ಜನತೆಗೆ ನಿಜವಾದ ಉಪಯೋಗ ಏನೂ ಇಲ್ಲ. ಜಯಲಲಿತಾ, ಮಾಯಾವತಿ ಮುಂತಾದವರು ಕೇವಲ ತಮ್ಮ ತಮ್ಮ ರಾಜ್ಯಗಳಿಗಾಗಿ (ಅದಕ್ಕಿಂತ ಹೆಚ್ಚಾಗಿ ತಮ್ಮ ಒಳಿತಿಗಾಗಿ) ಕೆಲಸಮಾಡುವವರು.

ಬೆಂಗಳೂರಿನ ಬಗ್ಗೆ, ಇಲ್ಲಿನ ಜನರ ಬಗ್ಗೆ, ಇಲ್ಲಿನ ಸಂಸ್ಕೃತಿಯಬಗ್ಗೆ, ಈ ಊರಿನ ಇತಿಹಾಸದ ಬಗ್ಗೆ ಏನೇನೂ ತಿಳುವಳಿಕೆ, ಪ್ರೀತಿಗಳಿಲ್ಲದವರಿಂದ ಬೆಂಗಳೂರಿಗೆ ಒಳಿತಾಗಲು ಹೇಗೆ ಸಾಧ್ಯ? ಸಂವಿಧಾನದ ಪ್ರಕಾರ ಇವರುಗಳು ಬೆಂಗಳೂರಲ್ಲಿ ಬಂದು ಚುನಾವಣೆಗೆ ನಿಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ರೆ, ಇವರನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಸಾಧ್ಯವಿದೆ. ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಜನರನ್ನ ಕಣಕ್ಕಿಳಿಸಿದೆ. ಕರ್ನಾಟಕದ ಜನತೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿರುವ ಈ ಪಕ್ಷ ಅದಿಕಾರಕ್ಕೆ ಬಂದು, ಬೆಂಗಳೂರಿಗೆ ಒಳ್ಳೆಯದನ್ನು ಮಾಡಲಿ. ಕರ್ನಾಟಕಕ್ಕೆ ಬಹುವರ್ಷಗಳಿಂದ ಅವಶ್ಯವಾಗಿರುವ ಪ್ರಾದೇಶಿಕ ಪಕ್ಷವಾಗಿ ಕ.ರ.ವೇ ಬೆಳೆದು ಕರ್ನಾಟಕಕ್ಕೆ ಒಳ್ಳೆಯದಿನಗಳು ಆರಂಭವಾಗಲಿ ಎನ್ನುವುದೇ ನನ್ನ ಹಾರೈಕೆ.